ಚಿತ್ರಲೋಕ ಮೂವೀಸ್ ಲಾಂಛನದಲ್ಲಿ ಕೆ.ಎಂ.ವೀರೇಶ್ ಅವರು ನಿರ್ಮಿಸುತ್ತಿರುವ ‘ಆಕ್ಟರ್ ಚಿತ್ರದ ಮುಹೂರ್ತ ಸಮಾರಂಭ ಆರ್.ಟಿ.ನಗರದ ಸಾಯಿಮಂದಿರದ ಬಳಿಯಿರುವ ಶಿವನ ದೇವಸ್ಥಾನದಲ್ಲಿ ನೆರವೇರಿತು. ನಾಯಕ ದೇವರಿಗೆ ನಮಿಸುವ ಪ್ರಥಮ ಸನ್ನಿವೇಶಕ್ಕೆ ಹಿರಿಯ ನಟ ಶ್ರೀನಿವಾಸಮೂರ್ತಿ ಆರಂಭ ಫಲಕ ತೋರಿದರು. ಶ್ರೀಮತಿ ತನುಜಾ ವೀರೇಶ್, ಶ್ರೀಮತಿ ಪುಷ್ಪಾಶ್ರೀನಿವಾಸಮೂರ್ತಿ ಹಾಗೂ ಶ್ರೀಮತಿ ಅಶ್ವಿನಿ ನವೀನ್ಕೃಷ್ಣ ಕ್ಯಾಮೆರಾ ಚಾಲನೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕೆ.ವಿ.ಚಂದ್ರಶೇಖರ್, ಎಂ.ಜಿ.ರಾಮಮೂರ್ತಿ, ಎಂ.ಎನ್.ಸುರೇಶ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.
ದಯಾಳ್ಪದ್ಮಾನಾಭನ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ನವೀನ್ಕೃಷ್ಣ ಅಭಿನಯಿಸುತ್ತಿದ್ದಾರೆ. ಸಿಹಕಹಿಗೀತಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡುತ್ತಿದ್ದಾರೆ. ದಯಾಳ್ ಹಾಗೂ ಅವಿನಾಶ್ ಶೆಟ್ಟಿ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.